ನಮ್ಮ ದೇಹಕ್ಕೆ ರೋಗಾಣುಗಳಿಂದ ಮತ್ತು ಕಾಯಿಲೆಗಳಿಂದ ರಕ್ಷಣೆ ನೀಡಿ, ಅವುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಒದಗಿಸಿ ಸೇನೆಯಂತೆ ಕೆಲಸ ನಿರ್ವಹಿಸುವ ಒಂದು ವ್ಯವಸ್ಥೆಯನ್ನು ಗುರುತಿಸಿದ್ದಾರೆ. ಅವುಗಳು ನಾವು ಸೇವಿಸುವ ಆಹಾರಗಳಿಂದ ಅಭಿವೃದ್ಧಿ ಹೊಂದಿ ರಕ್ಷಾ ಕವಚದಂತೆ ಕಾಪಾಡುತ್ತವೆ. ಇವು ನಮಗೆ ಎದುರಾಗುವ ಸಾಮಾನ್ಯ ಶೀತ, ಜ್ವರಗಳಿಂದ ಹಿಡಿದು ಮಹಾನ್ ಕಾಯಿಲೆಗಳನ್ನು ಹೊಡೆದೋಡಿಸುವ ಪ್ರಯತ್ನವನ್ನು ಸದಾ ಮಾಡುತ್ತಲೇ ಇರುತ್ತವೆ. ಇವು ನಮ್ಮ ಹುಟ್ಟಿನಿಂದ ಹಿಡಿದು ಸಾಯುವವರೆಗೆ ನಮ್ಮ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತವೆ. ಈ ಪ್ರತಿರಕ್ಷಣಾ ವ್ಯವಸ್ಥೆಯನ್ನೇ ನಾವು ರೋಗ ನೀರೋಧಕಗಳು ಎಂದು ಕರೆದುಕೊಂಡಿದ್ದು, ಅವುಗಳನ್ನು ಹೆಚ್ಚಿಸುವ ಕೆಲವು ಆಹಾರಗಳ ಕುರಿತಾಗಿ ಇಂದು ಚರ್ಚಿಸೋಣ…
ಆಹಾರಗಳು ನಮಗೆ ಅವಶ್ಯಕ ಜೀವಸತ್ವಗಳು, ಪೋಷಕಾಂಶಗಳು ಹಾಗೂ ಈ ರೋಗ ನೀರೋಧಕತೆಯನ್ನು ಹೆಚ್ಚಿಸಿಕೊಳ್ಳುವ ಶಕ್ತಿಯನ್ನು ನೀಡಬಲ್ಲವಾಗಿವೆ. ಅಂತಹ ಆಹಾರ ಪದಾರ್ಥಗಳು ನಮ್ಮ ನಡುವೆಯೇ ಇದ್ದು, ಅವುಗಳ ಕುರಿತಾಗಿ ನಾವು ತಿಳಿದುಕೊಳ್ಳುವುದು ಅವಶ್ಯವಾಗಿವೆ.
ರೋಗನಿರೋಧಕ ವ್ಯವಸ್ಥೆ ಎಂದರೇನು?
ಪ್ರತಿರಕ್ಷಣಾ ವ್ಯವಸ್ಥೆಯು ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸುತ್ತದೆ. ಇದು ನಮ್ಮ ದೇಹದ ರಕ್ಷಣಾ ಕಾರ್ಯವಿಧಾನದ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಉಳಿವಿಗಾಗಿ ಇದು ಅವಶ್ಯಕವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಇತರ ರೋಗಕಾರಕಗಳು ವಿದೇಶಿ ದೇಹಗಳಿಂದ ನಮ್ಮ ದೇಹಕ್ಕೆ ಆಕ್ರಮಣ ಮಾಡಲು ಮುಕ್ತ ಅವಕಾಶ ದೊರೆತಂತೆ ಆಗುತ್ತದೆ. ನಮ್ಮ ರೋಗನಿರೋಧಕ ವ್ಯವಸ್ಥೆಯಲ್ಲಿನ ಜೀವಕೋಶಗಳು, ಅಂಗಾಂಶಗಳು ಮತ್ತು ಅಂಗಗಳ ಈ ಸಂಕೀರ್ಣ ಜಾಲವು ನಮ್ಮನ್ನು ರಕ್ಷಿಸಲು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.
ಇದನ್ನೂ ಓದಿರಿ: ಅಮೃತ ಬಳ್ಳಿಯನ್ನು ಪ್ರತಿದಿನ ಉಪಯೋಗಿಸುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
ರೋಗನಿರೋಧಕ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ?
ಪ್ರತಿರಕ್ಷಣಾ ವ್ಯವಸ್ಥೆಯು ಅಂಗಾಂಶಗಳು ಮತ್ತು ಜೀವಕೋಶಗಳ ವ್ಯಾಪಕ ಜಾಲವನ್ನು ಒಳಗೊಂಡಿರುತ್ತದೆ, ಅದು ನಿರಂತರವಾಗಿ ಆಕ್ರಮಣಕಾರಿ ರೋಗಕಾರಕಗಳನ್ನು ಹುಡುಕುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ವಿದೇಶಿ ದೇಹವನ್ನು ಪತ್ತೆ ಮಾಡಿದ ನಂತರ, ಅದು ಆಕ್ರಮಣಕಾರರ ವಿರುದ್ಧ ಯುದ್ಧವನ್ನು ಪ್ರಾರಂಭಿಸುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯು ನಮ್ಮ ದೇಹದಾದ್ಯಂತ ಹರಡಿದೆ ಮತ್ತು ಇದು ಅನೇಕ ಅಂಗಾಂಶಗಳು, ಜೀವಕೋಶಗಳು, ಪ್ರೋಟೀನ್ಗಳು ಮತ್ತು ವಿಶೇಷ ಅಂಗಗಳಿಂದ ಕೂಡಿದೆ, ಅದು ನಮ್ಮ ದೇಹದ ಅಂಗಾಂಶಗಳನ್ನು ಆಕ್ರಮಣಕಾರಿಗಳಿಂದ ಪ್ರತ್ಯೇಕಿಸುತ್ತದೆ. ರೋಗನಿರೋಧಕ ಜಾಲವು ಸತ್ತ ಅಥವಾ ಅಸಹಜ ಅಂಗಾಂಶಗಳನ್ನು ಸಹ ಪತ್ತೆ ಮಾಡುತ್ತದೆ, ಅವು ದೇಹದಿಂದ ಹೊರಹಾಕಲ್ಪಡುತ್ತವೆ.
ನಮ್ಮ ರೋಗನಿರೋಧಕತೆಯನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವ ಆಹಾರಗಳು
ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ನಾವು ಹೆಚ್ಚಾಗಿ ಸಾಂಬಾರ ಪದಾರ್ಥವಾಗಿ ಹಲವಾರು ಅಡುಗೆಗಳಲ್ಲಿ ಬಳಸಿಕೊಂಡು ಬಂದಿದ್ದೇವೆ. ಈ ಬೆಳ್ಳುಳ್ಳಿಯು ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯುಕ್ತವಾದ ಶಕ್ತಿಯನ್ನು ನಮಗೆ ನೀಡುತ್ತಾ ಬಂದಿದೆ. ಇದರ ಸೇವನೆಯಿಂದ ರಕ್ತದ ಅಧಿಕ ಒತ್ತಡವು ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೇ ಇದು ಪ್ರಭಲ ಸೋಂಕು ನಿವಾರಕವಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಅತಿಯಾಗಿ ಶೇಖರಣೆಯಾದ ಅಧಿಕ ಕೊಬ್ಬು ನಿವಾರಣೆಯಾಗುತ್ತದೆ. ಇವುಗಳೇ ಅಲ್ಲದೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ ಇದರಲ್ಲಿ ಅಲಿಸಿನ್ ಎಂಬ ಅಂಶವು ಇದ್ದು, ಇದು ದೇಹದಲ್ಲಿ ಉತ್ಕರ್ಷಣ ಶಕ್ತಿಯನ್ನು ಕಡಿಮೆಮಾಡಿ, ಇದರಲ್ಲಿರುವ ಇತರ ಅಂಶಗಳೊಡನೆ ಸೇರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸುತ್ತದೆ.
ಅರಿಶಿನ
ಅರಿಶಿನವು ನಮ್ಮಲ್ಲಿ ಸಾಂಪ್ರದಾಯಕವಾಗಿ ಹಿಂದಿನಿಂದಲೂ ಬಳಕೆಗೆ ಬಂದಿದೆ. ಇವುಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಜ್ವರ, ಶೀತ, ಕೊಲೆಸ್ಟ್ರಾಲ್ ನಿಯಂತ್ರಣ ಸೇರಿದಂತೆ ಚರ್ಮ ರೋಗಳಳನ್ನು ನಿವಾರಿಸುತ್ತದೆ. ಚರ್ಮದ ರೋಗಗಳ ನಿವಾರಣೆಗೆ ಕೊಬ್ಬರಿ ಎಣ್ಣೆಯೊಂದಿಗೆ ಅರಿಶಿನವನ್ನು ಬೆರೆಸಿ ಹಚ್ಚುವ ಮೂಲಕ ಶಮನವನ್ನು ಕಾಣಬಹುದಾಗಿದೆ. ಇದೇ ರೀತಿ ಜ್ವರ, ಶೀತದ ಲಕ್ಷಣಗಳು ಕಂಡು ಬಂದಾಗ ಹಾಲಿನೊಂದಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಶೀಘ್ರದಲ್ಲಿ ನಿವಾರಣೆ ದೊರೆಯುತ್ತದೆ. ಇವೆಲ್ಲವುಗಳ ಜೊತೆಯಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವಾಗಿ ಇದು ಗುರುತಿಸಿಕೊಂಡಿದೆ. ದಿನನಿತ್ಯ ತಯಾರಿಸುವ ನಮ್ಮ ಆಹಾರದಲ್ಲಿ ಇದನ್ನು ಸೇರಿಸಿ ತೆಗೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯು ದೊರೆತಂತಾಗುತ್ತದೆ.
ಶುಂಠಿ
ಶುಂಠಿ ಅತ್ಯುತ್ತಮ ರೋಗನಿವಾರಕಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಭಲ ಉತ್ಕರ್ಷಣ ನಿರೋಧಕ ಗುಣಗಳಿವೆ. ಇದರಿಂದಾಗಿ ದೇಹಕ್ಕೆ ಉಂಟಾಗುವ ಹಲವಾರು ತೊಂದರೆಗಳನ್ನು ನಿವಾರಿಸಿ, ದೇಹಕ್ಕೆ ಸೇರಿರುವ ಹಾನಿಕಾರಕ ವಿಷಗಳನ್ನು ದೂರಮಾಡಿ ನಮ್ಮನ್ನು ಕಾಪಾಡುತ್ತದೆ. ದೇಹದ ಸಂಪೂರ್ಣ ಆರೋಗ್ಯವನ್ನು ನಿಯಂತ್ರಣಕ್ಕೆ ತಂದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯಮಾಡುತ್ತದೆ. ಅಲ್ಲದೇ ಇದು ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ಟ್ರಿಕ್ ನಂತಹ ಹಲವಾರು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದರ ಕಷಾಯವನ್ನು ಕುಡಿಯುವುದರಿಂದ ಗಂಟಲು ನೋವಿನಂತಹ ಸಮಸ್ಯೆಗಳು ದೂರವಾಗುತ್ತವೆ.
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅವಶ್ಯಕವಾಗಿರುವ ಶಕ್ತಿಯನ್ನು ತಮ್ಮಲ್ಲಿ ತುಂಬಿಕೊಂಡಿವೆ. ಸಿಟ್ರಸ್ ಹಣ್ಣುಗಳಲ್ಲಿ ಹೇರಳವಾಗಿ ವಿಟಮಿನ್-ಸಿ ಅಂಶವು ಹೇರಳವಾಗಿವೆ. ಇವುಗಳು ಬಿಳಿರಕ್ತ ಕಣಗಳನ್ನು ಹೆಚ್ಚಿಸಲು ತುಂಬಾ ಅವಶ್ಯಕವಾಗಿವೆ. ಇವು ನಮ್ಮಲ್ಲಿ ಬಿಲಿರಕ್ತಕಣಗಳನ್ನು ಹೆಚ್ಚಿಸಿ ರೋಗಕಾರಕಗಳ ವಿರುದ್ದ ಹೋರಾಡಲು ಅಣಿಮಾಡುತ್ತವೆ. ಸಿಟ್ರಸ್ ಹಣ್ಣುಗಳಲ್ಲಿ ಸಾಮಾನ್ಯವಾಗಿ ಲಿಂಬೆ ಹಣ್ಣು, ಮೋಸಂಬಿ ಹಣ್ಣು, ಕಿತ್ತಳೆ ಹಣ್ಣು, ಇಳಿ ಹಣ್ಣು ಮತ್ತು ದ್ರಾಕ್ಷಿ ಹಣ್ಣುಗಳು ಸೇರಿವೆ. ಇವುಗಳಲ್ಲದೆ ನೆಲ್ಲಿಕಾಯಿಯಲ್ಲಿಯೂ ಹೇರಳವಾಗಿ ಸಿ ಜೀವಸತ್ವವು ಕಂಡುಬರುತ್ತದೆ. ಇದು ಸಹ ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತದೆ.
ತುಳಸಿ
ಇದನ್ನೂ ಓದಿರಿ: ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!
ಇದರಲ್ಲಿ ನಮ್ಮ ಆರೋಗ್ಯವನ್ನು ಸುಧಾರಿಸುವ ಹಲವಾರು ಉತ್ತಮ ಗುಣಗಳಿವೆ ಆದ್ದರಿಂದ ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ತುಳಸಿಗೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಇದರಲ್ಲಿ ಶೀತ, ಗಂಟಲು ನೋವು, ಮಲೇರಿಯಾ ಹಾಗೂ ಹಲವು ಹೃದಯ ಸಂಬಂಧಿ ರೋಗಗಳನ್ನು ನಿವಾರಿಸುವ ಶಕ್ತಿ ಅಡಕವಾಗಿವೆ. ತುಳಸಿಯ ರಸವನ್ನು ಜೇನು ತುಪ್ಪದೊಂದಿಗೆ ಸೇರಿಸಿ ತೆಗೆದುಕೊಳ್ಳುವುದರಿಂದ ಗಂಟಲು ನೋವಿನ ಸಮಸ್ಯೆಯು ದೂರವಾಗುತ್ತದೆ. ಅಲ್ಲದೇ ಹಲವಾರು ಚರ್ಮ ರೋಗಗಳಿಗೆ ಇದರ ರಸವು ರೋಗ ನಿವಾರಕವಾಗಿ ಕೆಲಸ ಮಾಡುತ್ತದೆ.
ಅಮೃತಬಳ್ಳಿ
ಅಮೃತ ಬಳ್ಳಿ ಹೆಸರೇ ಹೇಳುವಂತೆ ನಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಉಪಯುಕ್ತವಾದ ಆಯುರ್ವೇದ ತಿಳಿಸಿರುವ ಒಂದು ಮೂಲಿಕೆಯ ಬಳ್ಳಿಯಾಗಿದೆ. ಇದರ ಕಷಾಯವನ್ನು ಹಸಿದ ಹೊಟ್ಟೆಯಲ್ಲಿ ಸ್ವಲ್ಪ ತೆಗೆದುಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯ ಹೆಚ್ಚಳದ ಜೊತೆ ಜೊತೆಗೆ ಇನ್ನೂ ಅನೇಕ ಉತ್ತಮ ಪರಿಣಾಮಗಳು ಲಭಿಸುತ್ತದೆ. ಇದರ ಸೇವನೆಯಿಂದ ಸಂಧಿವಾತ, ಕೆಮ್ಮು, ಜ್ವರ, ಬಿಲಿಸೆರಗು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ.
ಪ್ರಕೃತಿಯು ನಮಗೆ ಅದ್ಬುತ ಆರೋಗ್ಯವನ್ನು ಪಡೆದುಕೊಳ್ಳಲು ಹಲವು ಉಪಯುಕ್ತವಾದ ವಸ್ತುಗಳನ್ನು ನೀಡಿದೆ. ಆದರೆ ಮಾನವ ಪ್ರಕೃತಿಯನ್ನು ಬಿಟ್ಟು ಹಣದ ಹಿಂದೆ ಬಿದ್ದು ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕೃತಕ ಔಷಧಗಳನ್ನು ತಯಾರಿಸಿ ಇನ್ನೊಂದಿಷ್ಟು ಅಪಾಯವನ್ನು ತಂದುಕೊಳ್ಳುತ್ತಿದ್ದಾನೆ. ಇವೆಲ್ಲವುಗಳನ್ನು ಮೀರಿ ಪ್ರಕೃತಿಯ ಚಿಕಿತ್ಸೆಗೆ ಮರಳುವ ಅವಶ್ಯಕತೆ ಇಂದು ಎದ್ದು ಕಾಣುತ್ತಿದೆ.
ಇದನ್ನೂ ಓದಿರಿ: ಒಂದು ಚಮಚ ಜೇನುತುಪ್ಪವನ್ನ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?