(ಈ ಕಥೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಸಾತಾರಾ ಸೈನಿಕ ಸ್ಕೂಲನಲ್ಲಿ ಓದಿದ ವೀರ
ಯೋಧನ ಜೀವನದ ಗಾಥೆಯನ್ನು ಕಥೆಯ ಮೂಲಕ ನಿರೂಪಿಸಿದ್ದೇನೆ. ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಪುರಸ್ಕಾರ ದೊರೆಯುತ್ತದೆ ಎಂದು ಬಾವಿಸಿದ್ದೇನೆ.)
ಗೋಡೆಯ ಮೇಲಿರುವ ಮಿಲ್ಟ್ರಿ ಯುನಿಫಾರ್ಮ್ನಲ್ಲಿ ವಿಜಯದ ನಗೆ ಬಿರುತ್ತಿದ್ದ ಶಮಂತನ ಫೋಟೋವನ್ನೆ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದ ಅಂಕಿತಾಳ ಮನಸ್ಸು ಭೂತಕಾಲಕ್ಕೆ ಓಡಿತು.
ಶಮಂತ ಮತ್ತು ಅಂಕಿತಾ ನೆರೆಮನೆಯವರು. ಮಿಗಿಲಾಗಿ ಬಾಲ್ಯ ಸ್ನೇಹಿತರು ಒಂದೇ ಶಾಲೆಯಿಂದ ಡಿಗ್ರೀವರೆಗೂ ಕಾಲೇಜನಲ್ಲಿ ಓದಿದವರು. ಇವರಿಬ್ಬರಲ್ಲದೆ ವಿಜಯ ಅಂತ ಇನ್ನೂಬ್ಬ ಕೂಡ ಇವರಿಬ್ಬರ ಬಾಲ್ಯ ಸ್ನೇಹಿತ. ಅವನು ಪಿ.ಯು. ನಂತರ ತನ್ನ ಇಷ್ಟದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಿದ್ದ. ಎಲ್ಲೇ ಹೋದರು ಮೂವರೂ ಜೊತೆಗಾಗುತ್ತಿದ್ದರು. ಜೊತೆಯಲ್ಲೇ ಬೆಳದವರಾದ್ದರಿಂದ ಅಂಕಿತಾಳ ಮನೆಯಲ್ಲೂ ಏನೂ ಅನ್ನುತಿರಲಿಲ್ಲ.
ಶಮಂತನಿಗೆ ಚಿಕ್ಕವನಿದ್ದಾಗಿನಿಂದ ಸೈನ್ಯಕ್ಕೆ ಸೇರುವ ಅದಮ್ಯ ಆಸೆಯಿತ್ತು. ಅದಕ್ಕೆಂತಲೇ ಅವನು ಬೇಕಾದ ಎಲ್ಲಾ ತರಬೇತಿ ಪಡೆಯುತ್ತಿದ್ದ.
ಅಂದು ಡಿಗ್ರಿ ಕೊನೆಯ ವರ್ಷದ ಅಂತಿಮ ದಿನವಾಗಿತ್ತು, ಇಬ್ಬರೂ ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದೆವು. ಪಾರ್ಕ್ ಒಂದರ ಹತ್ತಿರ ನಮ್ಮ ಬೈಕ್ ಬರುತ್ತಿದ್ದಂತೆಯೇ ಶಮಂತ್ ಅದರ ಸ್ಪೀಡನ್ನು ನಿಧಾನಮಾಡಿ ಅಂಕು ನಿನ್ನ ಹತ್ತಿರ ತುಂಬಾ ಇಂಪಾಟೆಂಟ್ ವಿಷಯ ಮಾತಾಡಬೇಕಿತ್ತು, ಬಾ ಇಲ್ಲೇ ಇರುವ ಪಾರ್ಕ್ ಗೆ ಹೋಗೋಣಾ ಎಂದು ಬೈಕ್ ಪಾರ್ಕ್ ಮಾಡಿ ತನ್ನ ಕೈಹಿಡಿದು ಕೊಂಡೆ ಒಳಗೆ ಬಂದ. ಅದೇನು ಅಂಥಾದ್ದು ಇಲ್ಲಿ ಹೇಳುವಂಥಾದ್ದು ಕಾಲೇಜಲ್ಲಿ ಮನೆಯಲ್ಲಿ ಹೇಳಬಹುದಲ್ಲಾ ಅಂತ ಅನ್ನುತ್ತಿದ್ದ ನನ್ನ ಕೈಯನ್ನು ತನ್ನ ಕೈಯಲ್ಲಿ ಮೃದುವಾಗಿ ಹಿಡಿದು ಅಂಕು ನನ್ನನ್ನ ನೋಡಿದರೆ ನಿನಗೆ ಏನು ಅನಿಸುತ್ತದೆ..? ಅಂತ ನನ್ನ ಕಣ್ಣಲ್ಲೇ ತನ್ನ ಕಣ್ಣಿನ ದೃಷ್ಟಿಯನ್ನು ಕೀಲಿಸಿ ಕೇಳಿದಾಗ ಏನೋ ಒಂದು ತರಹದ ರೋಮಾಂಚನ ನನ್ನಲ್ಲಿ ಆಗಿತ್ತು. ಅದೇನೆಂದು ಆ ಕ್ಷಣಕ್ಕೆ ಅರಿವಾಗಿರಲಿಲ್ಲ. ಅದಕ್ಕೇನೆ ನಾನಂದು ನೀನು ನನ್ನ ಪ್ರಾಣ ಸ್ನೇಹಿತ ಕಣೋ, ನೀನಿಲ್ಲವೆಂದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ ಕಣೋ ಎಂದೇಳಿದ್ದೆ. ಆದರೆ ಅವನು ಅಂದು ಅಂದಿದ್ದು ಇಂದೂ ಕೂಡಾ ಕಿವಿಯಲ್ಲಿ ಕಚಗುಳಿ ಇಟ್ಟಂತೆ ಆಗುತ್ತದೆ. ಅಂಕು ನಾನು ನಿನ್ನ ತುಂಬಾ ತುಂಬಾ ಪ್ರೀತಿಸತೀನಿ… ನೀ ಎಂದ್ರೆ ನನಗೆ ತುಂಬಾ ಇಷ್ಟ, ನಿನ್ನ ಜೊತೆಗೆ ನಾ ನನ್ನ ಪೂರ್ತಿ ಜೀವನವನ್ನು ಕಳೆಯಬೇಕೆಂದಿರುವೆ…ಆಯ್ ಲವ್ ಯೂ ಅಂಕು ಅಂತ ಹೇಳಿದ್ದನಲ್ಲವೇ.. ನೀನಾಗಿ ನನ್ನ ಪ್ರೀತಿಸುತ್ತೇನೆ ಎಂದು ಹೇಳುವವರೆಗೂ ನಾನು ನಿನಗಾಗಿ ಕಾಯುತ್ತೇನೆ. ಅದಾಗದಿದ್ದರೂ ಹೀಗೆಯೇ ಪ್ರಾಣ ಸ್ನೇಹಿತರಾಗಿ ಇರೋಣ ಎಂದು ಹೇಳಿದ್ದ. ನಾನೂ ಅದೇನೋ ಮಾಂತ್ರಿಕತೆಯಲ್ಲಿ ತಲೆ ಆಡಿಸಿದ್ದೆ. ಆಮೇಲೆ ದಿನಗಳು ಹೇಗೆ ಉರಳಿದವೋ ಅರ್ಥವೇ ಆಗಲಿಲ್ಲ.
ನಾನು ಎಮ್.ಎಸ್ಸಿ. ಮೈಕ್ರೊ ಬಯಲಾಜಿಗೆ ಸೇರಿದ್ದೆ. ಶಮಂತ ಕೂಡಾ ಎಮ್.ಎಸ್ಸಿ. ಮೇಥಮಿಟಿಕ್ಸ್ ಗೆ ಎಕ್ಷ್ಟ್ರನಲ್ ಆಗಿ ಅಡ್ಮಿಷನ್ ಆಗಿತ್ತು. ಆರ್ಮಿ ಆಫೀಸರ್ ಟ್ರೇನಿಂಗ್ ಗೆ ಡೇಹರಾಡುನಿಗೆ ತೆರಳಿದ್ದ. ಮೊದಮೊದಲು ಶಮಂತ್ ಇಲ್ಲದೆ ಬೇಜಾರು ಅನಿಸುತ್ತಿತ್ತು. ಅವನನ್ನ ತುಂಬಾನೆ ಮಿಸ್ ಮಾಡಕೊಳ್ಳುತ್ತಿದ್ದೆ. ಯಾವಾಗಲಾದರೂ ಅವನ ಕರೆ ಬಂದರೆ ಅವನ ಧ್ವನಿ ಕೇಳುತ್ತಲೇ ಗಂಟಲು ಉಬ್ಬಿದಂತಾಗುತ್ತಿತ್ತು .ಶಮಂತ್ ಅಲ್ಲಿಯ ಎಲ್ಲ ವಿಷಯಗಳನ್ನು ತುಂಬಾ ಉತ್ಸಾಹ ದಿಂದ ವಿವರಿಸುತ್ತಿದ್ದ. ಇನ್ನಾರು ತಿಂಗಳಲ್ಲಿ ಲೆಪ್ಟಿನೆಂಟ್ ಶಮಂತ್ ಆಗಿ ನಿಮ್ಮನೆಲ್ಲ ನೋಡಲು ಬರುತ್ತೇನೆಂದು ಹೆಮ್ಮೆಯಿಂದ ಹೇಳುತ್ತಿದ್ದ. ವಿಜಯಗು ಶಮಂತ ಇಲ್ಲದೆ ತುಂಬಾ ಬೇಜಾರಾಗುತ್ತಿತ್ತು. ಇಬ್ಬರಿಗೂ ಕಾಲೇಜ್ನ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆಂಟಿ ಅಂಕಲ್ ಮನೆಗೆ ಹೋದಾಗಲೆಲ್ಲ ಅವರು ಶಮಂತನ ಬಾಲ್ಯದ ಬಗೆಗೆ ಮನಃಪೂರ್ತಿ ಮಾತಾಡುತ್ತಿದ್ದರು. ಶಮಂತ್ ಇಲ್ಲ ಅಂತ ಬರುವದು ಬಿಡಬೇಡ ನಿನ್ನನ್ನು ನೋಡಿ ಮನಸ್ಸು ಸಮಾಧಾನವಾಗುತ್ತದೆ ಅಂತ ಇದ್ದರು.
ಆ ದಿನ ತುಂಬಾ ಸಂತಸದ ದಿನ. ಯಾಕೆಂದ್ರೆ ಶಮಂತ್ ಅಂದು ಲೆಫ್ಟಿನೆಂಟ್ ಆಗಿ ಮೊದಲ ಬಾರಿಗೆ ಮನೆಗೆ ಬರುತ್ತಿದ್ದಾನೆ. ಅವನ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಅವನ ಅಪ್ಪ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೆತ್ತೊಡಲು ಅಲ್ಲವಾ.. ಕೊನೆಗೂ ಶಮಂತ್ ಸಂಜೆಗೆ ಒಬ್ಬಂಟಿಯಾಗಿ ಸಿಕ್ಕಾಗ ಇಬ್ಬರಲ್ಲೂ ಮಾತಾಡಲು ಮಾತೇ ಇರಲಿಲ್ಲ. ಅವನ ಕಣ್ಣುಗಳಲ್ಲಿ ನಿರೀಕ್ಷೆ ಇದ್ದರೆ ನನ್ನ ಕಣ್ಣುಗಳೆ ಅವನ ಪ್ರಶ್ನೆಗೆ ಉತ್ತರದಂತದ್ದವು. ಹೇಳಲಾರದ ನೂರೆಂಟು ಮಾತುಗಳನ್ನು ಕಣ್ಣುಗಳೇ ಹೇಳಿದ್ದವು. ನನ್ನ ಬಾಯಿಂದ ಬಂದ ಒಂದೇ ಮಾತು ಆಯ್ ಲವ್ ಯು ಮೈ ಸೋಲ್ಜರ್ ಎಂದಿತ್ತು… ಅವನು ನನ್ನನಪ್ಪಿ ಮುದ್ದಾಡುತ್ತ ಲವ್ ಯು ಟು ಅಂದಿದ್ದನು. ಆಮೇಲೆಲ್ಲ ಕನಸಿನ ಹಾಗಿತ್ತು ಯಾಕೆಂದ್ರೆ ಮನೆಯವರು ಹದಿನೈದು ದಿನಗಳಲ್ಲಿ ನಮ್ಮ ಮದುವೆಯನ್ನೂ ಮಾಡಿ ಮುಗಿಸಿದ್ದರು…
ಶಮಂತ್ ಮತ್ತು ಅತ್ತೆ ಮಾವರ ಪ್ರೀತಿಯಲ್ಲಿ ಒಂದೂವರೆ ತಿಂಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಅಂದು ಶಮಂತ್ ಡ್ಯೂಟಿಗೆ ರಿಪೋರ್ಟ್ ಮಾಡಲು ಹೋಗುವವನಿದ್ದ. ಅವನ ಪೋಸ್ಟಿಂಗ್ ಸಿಯಾಚಿನ್ ಪ್ರದೇಶದಲ್ಲಿ ಆಗಿತ್ತು. ಅತ್ತೆ ಮಾವರ ಮುಖದಲ್ಲಿದ್ದ ಆತಂಕಕ್ಕೆ ನನ್ನ ಹೃದಯದಲ್ಲೂ ಕಂಪನ ಶುರುವಾಗಿದ್ದವು. ಆದರೆ ಶಮಂತ್ ಈಗ ಕೆಚ್ಚೆದೆಯ ವೀರ ನಾಗಿದ್ದ, ಅವನ ಪ್ರತಿ ಮಾತುಗಳಲ್ಲೂ ದೇಶಪ್ರೇಮ ಉಕ್ಕಿ ಹರಿಯುತ್ತಿತ್ತು. ನಸುನಗುತ್ತಲೇ ಅವನನ್ನು ಏರ್ಪೋರ್ಟ್ ನಲ್ಲಿ ಬಿಳ್ಕೊಟ್ಟರು. ಮನೆಗೆ ಬಂದ ಮೇಲೆ ಮನೆಮನಗಳಲ್ಲಿ ಶೂನ್ಯತೆ ಆವರಿಸಿತ್ತು ಅತ್ತೆ ಮಾವರ ಸ್ಥಿತಿಯೂ ಬೆರೆಯಾಗಿರಲಿಲ್ಲ. ಮತ್ತೆ ನನ್ನ ಕೊನೆಯ ವರ್ಷದ ಎಮ್.ಎಸ್ಸಿ. ಮೂರನೇ ಸೆಮಿಸ್ಟರ್ ಶುರುವಾಗಿತ್ತು. ವಿಜಯ ಎಂ.ಎಸ್. ಮಾಡಲು ಅಮೆರಿಕಾಗೆ ಹೋಗುವ ತಯಾರಿಯಲ್ಲಿದ್ದ. ಶಮಂತನ ಜೊತೆ ದಿನವೂ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ನೆಟ್ವರ್ಕ್ ಇರುತ್ತಿರಲಿಲ್ಲ ಒಮ್ಮೊಮ್ಮೆ ಅವನಿಗೆ ಬಿಡುವೆ ಸಿಗುತ್ತಿರಲಿಲ್ಲ. ಮೈ ಕೊರೆಯುವ ಚಳಿಯಲ್ಲಿ ಹಗಲು ರಾತ್ರಿ ಎನ್ನದೆ ಹಿಮವನ್ನೇ ಹೊದ್ದು ದೇಶಕ್ಕಾಗಿ ಕೆಲಸಮಾಡುವ ಸೈನಿಕರನ್ನು ನೆನೆದು ಅವರ ಬಗ್ಗೆ ಗೌರವ ತಾನೇ ತಾನಾಗಿ ಮೂಡುತ್ತದೆ. ಅಂತ ನಿಸ್ವಾರ್ಥ್ ಸೇವೆ ಅವರದ್ದು. ಶಮಂತ್ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಸಮಯ ಸಿಕ್ಕಗಲೆಲ್ಲ ಹೇಳುತ್ತಿದ್ದನು. ಆಗ ಅವನ ಧ್ವನಿಯಲ್ಲಿಯ ಆ ದೇಶಪ್ರೇಮವನ್ನು ನೋಡಿ ಮನಸು ಮೂಕವಾಗುತ್ತಿತ್ತು.
ಇಡೀ ಒಂದು ವರುಷ ನಾವಿಬ್ಬರೂ ಫೋನಿನಲ್ಲಿಯೇ ನಮ್ಮಿಬ್ಬರ ಪ್ರೀತಿಯನ್ನು ಬೆಳೆಸುತ್ತಿದ್ದೆವು. ಕೆಲವೊಮ್ಮೆ ಮಾತಿನ ಮದ್ಯೆ ಗುಂಡಿನ ಶಬ್ದಗಳನ್ನು ಕೇಳಿ ಹೃದಯ ತಲ್ಲಣಿಸಿಹೋಗುತ್ತಿತ್ತು. ಕೆಲವೊಮ್ಮೆ ಅದಾದ ನಂತರ ಎರಡು ಮೂರು ದಿನಗಳವರೆಗೆ ಸಂಪರ್ಕವೇ ಸಿಗುತ್ತಿರಲಿಲ್ಲ. ಆಗೆಲ್ಲ ಮನದ ತುಂಬೆಲ್ಲ ಅಶಾಂತಿಯೇ ತುಂಬಿಕೊಳ್ಳುತ್ತಿತ್ತು. ಅತ್ತೆ ಮಾವರ ಪರಿಸ್ಥಿತಿಯು ಕೂಡ ಹಾಗೆ ಇರುತ್ತಿತ್ತು.
ಒಂದು ವರ್ಷದ ನಂತರ ಅವನು ರಜೆಗೆ ಬರುವವನಿದ್ದ ಮತ್ತು ಈ ಸಾರಿ ನನ್ನನ್ನು ಅವನಲ್ಲಿಗೆ ಕರೆದೊಯ್ಯಲು ಅನುಮತಿ ಪಡೆದಿದ್ದ. ಮನೆಯಲ್ಲಿ ಸಂತೋಷ ತುಂಬಿತ್ತು. ಎರಡು ತಿಂಗಳು ರಜೆಯಲ್ಲಿ ಎರಡೂ ಮನೆಗೆ ಮಗನಂತೆಯೇ ಇದ್ದ. ನನ್ನ ಅಪ್ಪ ಅಮ್ಮ ನಿಗೆ ಶಮಂತ್ ತಮ್ಮ ಅಳಿಯ ಅಂತ ಹೇಳಕೋಲ್ಕೊಕೆ ತುಂಬಾ ಹೆಮ್ಮೆತಾಗುತ್ತಿತ್ತು.
ನಾವಿಬ್ವರು ಎಲ್ಲರಿಗೂ ವಿದಾಯ ಹೇಳಿ ಸತತ ಹದಿನಾರು ಗಂಟೆ ಪ್ರಯಾಣ ಮಾಡಿ ಶಮಂತ್ ಕೆಲಸಮಾಡುವ ಆ ಪ್ರದೇಶಕ್ಕೆ ಬಂದು ತಲುಪಿದೆವು. ನಿಧಾನವಾಗಿ ಅಲ್ಲಿಯ ಎಲ್ಲಾ ಜನರಲ್ಲಿ ಬೆರೆತು ಅಲ್ಲಿಯವರ ಕಷ್ಟ, ನೋವು, ಆತಂಕಗನ್ನು ತಿಳಿದುಕೊಳ್ಳುತ್ತಿದ್ದೇನು. ಶಮಂತ್ ಅಂತೂ ನನ್ನ ಮೇಲೆ ಪ್ರೀತಿಯ ಮಳೆಯನ್ನೇ ಹರಿಸುತ್ತಿದ್ದನು.
ಮತ್ತೆ ಒಂದು ವರ್ಷ ಹೇಗೆ ಕಳಿಯಿತು ಗೊತ್ತೇ ಆಗಲಿಲ್ಲ. ನಾನು ಅಲ್ಲಿಯ ಸೈನಿಕ ಸ್ಕೂಲ್ ನಲ್ಲಿಯೂ ಟೀಚರ್ ಕೆಲಸ ಮಾಡುತ್ತಿದ್ದೆ. ಸೈನ್ಯದವರ ಕಾರ್ಯ ನಿರ್ವಹಣೆ, ಅವರ ಕರ್ತವ್ಯ ನಿಷ್ಠೆಗೆ ಪ್ರತಿ ಬಾರಿಯೂ ಮನ ತಂತಾನೇ ಸೆಲ್ಯೂಟ್ ಹೊಡೆಯುತ್ತಿತ್ತು. ಮತ್ತೆ ನಾವಿಬ್ಬರು ರಜೆಗೆ ಊರಿಗೆ ತೆರಳಿದೆವು. ಎಲ್ಲರ ಜೊತೆ ಮಾತಾಡುತ್ತಾ, ಸುತ್ತುತ್ತಾ ದಿನ ಕಳೆದದ್ದೆ ಗೊತ್ತಾಗಲಿಲ್ಲ. ಮತ್ತೆ ನಮ್ಮ ಕೆಲಸಲ್ಲಿ ತೊಡಗಿಕೊಂಡೆವು. ಶಮಂತ್ ಈಗ ಗ್ರೂಪ್ ಕಮಾಂಡರ್ ಆಗಿದ್ದ, ಮೊದಲಿಗಿಂತ ಹೆಚ್ಚು ಜವಾಬ್ದಾರಿ ಇತ್ತು ಅವನಿಗೆ ಅವನು ಅದನ್ನು ತುಂಬಾ ನಿಷ್ಠೆಯಿಂದ ಮಾಡುತ್ತಿದ್ದನು. ನಾವು ಬಂದು ಆರು ತಿಂಗಳಾಗಿತ್ತು. ಒಂದು ದಿನ ತಲೆಗೆ ಸುತ್ತು ಬಂದಂತಾಗಿ ನೆಲದಲ್ಲೇ ಕುಸಿದು ಬಿದ್ದೆ…
ಸಿಯಾಚಿನ್ ಪ್ರದೇಶದ ಸೈನಿಕ ವಸತಿಗ್ರಹದಲ್ಲಿ ಸಂತೋಷದಿಂದ ವಾಸ ಜೀವನ ನಡೆಸುತ್ತಿದ್ದ ಸಮಂತ್ ಮತ್ತು ಅಂಕಿತಾ ಜೋಡಿಗೆ ಏನಾಯಿತು…ಇದ್ದಕ್ಕಿದ್ದಂತೆ ಅಂಕಿತಾ ಕುಸಿದು ಬೀಳಲು ಕಾರಣವೇನು …?
(ಮುಂದುವರೆಯುವುದು)
— ಪ್ರೇರಣಾ ಕುಲಕರ್ಣಿ
ಇಂತಹ ಕಥೆಗಳು, ಲೇಕನಗಳು ಪ್ರಕಟವಾದ ತಕ್ಷಣ ತಿಳಿಯಲು ನಮ್ಮ ವೆಬ್ ಸೈಟ್ ನ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. ಆಮೂಲಕ ನಮ್ಮಲ್ಲಿ ಹೊಸ ಲೇಖನ ಪ್ರಕಟವಾದ ಸೂಚನೆಯನ್ನು ಪಡೆಯಿರಿ…
SPONSORED CONTENT