ಬೆಂಗಳೂರು: ಕನ್ನಡ ಬಾವುಟವನ್ನು ಸುಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಎಂಇಎಸ್ ಸಂಘಟನೆ ನಿಷೇದಕ್ಕೆ ಆಗ್ರಹಿಸಿ ನಾಳೆ (ಡಿ.31) ಕರೆ ನೀಡಲಾಗಿದ್ದ ಬಂದನ್ನು ವಾಟಾಳ್ ನಾಗರಾಜ್ ಅವರು ವಾಪಾಸ್ ಪಡೆದಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕೊವಿಡ್ ಕೇಸುಗಳು ಹೆಚ್ಚಾಗುತ್ತಲಿದೆ, ಇದರಿಂದಾಗಿ ಬಂದ್ ಮಾಡುವುದು ಸರಿಯಲ್ಲ ಕೂಡಲೇ ಹಿಂಪಡೆಯಬೇಕೆಂದು ಹಲವು ನಾಯಕರು ಮನವಿ ಮಾಡಿದರೂ ವಾಟಾಳ್ ನಾಗರಾಜ್ ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಆದರೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ, ಜನರಿಗೆ ತೊಂದರೆಯಾಗುವುದರಿಂದ ಕರ್ನಾಟಕ ಬಂದ್ ಹಿಂಪಡೆಯಬೇಕೆಂದು ಮನವಿ ಮಾಡಿದ್ದರು.
ಇದನ್ನೂ ಓದಿರಿ: ಬಾಕ್ಸಿಂಗ್ ಡೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್ ಗಳ ಐತಿಹಾಸಿಕ ಜಯ, ಸರಣಿಯಲ್ಲಿ 1-0 ಮುನ್ನಡೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಗೃಹ ಕಚೇರಿ ಕೃಷ್ಣಾಗೆ ಕರೆಸಿ, ಮಾತುಕತೆ ನಡೆಸಿದ್ದಾರೆ. ಅಲ್ಲದೇ ಎಂಇಎಸ್ ನಿಷೇಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಭರವಸೆ ನೀಡಿದ್ದಾರೆ. ಹೊಸ ವರ್ಷಾಚರಣೆಯ ಸಮಯದಲ್ಲಿ ಬಂದ್ ನಡೆಸುವುದರಿಂದ ತೊಂದರೆ ಆಗುತ್ತದೆ ಎಂದು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಈ ಕುರಿತಂತೆ ವಾಟಾಳ್ ನಾಗರಾಜ ಮಾತನಾಡಿ, ಸಿಎಂ ಮನವಿಗೆ ಗೌರವ ನೀಡಲು ನಿರ್ಧರಿಸಿದ್ದೇನೆ. ಇದಲ್ಲದೇ ಒಕ್ಕೂಟದ ಮುಖಂಡರೂ ಬಂದ್ ಕೈಬಿಡುವಂತೆ ಒತ್ತಡ ಹೇರಿದ್ದರು. ಈ ರೀತಿಯ ಒತ್ತಡ ನನ್ನ ಜೀವನದಲ್ಲಿ ಎಂದೂ ಬಂದಿರಲಿಲ್ಲ. ಅವರ ಮಾತಿಗೆ ಕೊಡಬೇಕಾಯಿತು. ಸಿಎಂ ಭರವಸೆಯ ಹಿನ್ನೆಲೆಯಲ್ಲಿ ಬಂದ್ ಕೈ ಬಿಟ್ಟಿದ್ದೇವೆ, ಆದರೆ ಪ್ರತಿಭಟನೆ ಇರುತ್ತದೆ ಎಂದು ಹೇಳಿದ್ದಾರೆ.