ನವದೆಹಲಿ: ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಕರೋನಾ ಕುರಿತಂತೆ ಎಚ್ಚರಿಕೆಯನ್ನು ನೀಡುತ್ತಾ, ದೇಶದಲ್ಲಿ ಜಾರಿಯಾದ ಲಾಕ್ ಡೌನ್ ಗಳು ಮುಕ್ತಾಯವಾಗಿವೆ ಆದರೆ ಕೊರೋನಾ ಹರಡುವಿಕೆಯಲ್ಲ ಎಂದು ಹೇಳಿದ್ದಾರೆ.
ದೇಶದ ಜನತೆ ಕೊರೋನಾ ಸೋಂಕಿನ ಕುರಿತಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಗುಂಪುಗೂಡುವುದು, ಮಾಸ್ಕ್ ಧರಿಸದೇ ತಿರುಗಾಡುವುದು ಮಾಡುತ್ತಿದ್ದಾರೆ. ಇದರಿಂದಾಗಿ ತಾವು ಮಾತ್ರವಲ್ಲದೆ ತಮ್ಮ ಕುಟುಂಬವನ್ನೂ ಸಂಕಷ್ಟಕ್ಕೆ ದೂಡುತ್ತಾರೆ. ವ್ಯಾಕ್ಸಿನ್ ಸಿಗುವವರೆಗೆ ಮುನ್ನೆಚ್ಚರಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಹಲವಾರು ದೇಶಗಳು ವ್ಯಾಕ್ಸಿನ್ ತಯಾರಿಕೆಯಲ್ಲಿ ತೊಡಗಿವೆ. ಭಾರತವೂ ಸಹ ಈ ದಿಶೆಯಲ್ಲಿಯೇ ಸಾಗುತ್ತಿದ್ದು, ಕೆಲವು ಲಸಿಕೆಗಳು ಭರವಸೆಯನ್ನು ಮೂಡಿಸುವಂತಿವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಲಸಿಕೆ ಬಂದಾಗ ಪ್ರತಿಯೊಬ್ಬರಿಗೂ ತಲುಪಿಸಲಾಗುತ್ತದೆ. ದೇಶದ ಕೊನೆಯ ವ್ಯಕ್ತಿಯವರೆಗೂ ತಲುಪಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಸದ್ಯ ಅಮೆರಿಕಾ ಮತ್ತು ಬ್ರೆಜಿಲ್ ಗೆ ಹೋಲಿಕೆಯನ್ನು ಮಾಡಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ. ನಾವು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ದೇಶದಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಕೊರತೆಗಳಿಲ್ಲ ಎಂದು ತಿಳಿಸಿದರು. ಇದೆ ಸಮಯದಲ್ಲಿ ದೇಶದ ಎಲ್ಲಾ ಜನರಿಗೆ ನವರಾತ್ರಿ, ಈದ್ ಮಿಲಾದ್ ಹಾಗು ದೀಪಾವಳಿಯ ಶುಭಾಷಯ ತಿಳಿಸಲು ಮರೆಯಲಿಲ್ಲ.