ನವದೆಹಲಿ: ಇಂದು ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ (Modi Cabinet Reshuffle) ಮಾಡಿದ್ದು, ರಾಜ್ಯದ ನಾಲ್ವರು ಸೇರಿ ಒಟ್ಟು 43 ಸಂಸದರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದಾರೆ. ಕರ್ನಾಟಕದ ಎ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಮತ್ತು ಭಗವಂತ್ ಖುಬಾ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಬ್ಬರು ಸಚಿವರ ಸಾವು, ಶಿವಸೇನೆ ಮತ್ತು ಅಕಾಲಿದಳ ಮೈತ್ರಿ ಮುರಿದುಕೊಂಡ ಕಾರಣಗಳಿಂದಾಗಿ ತೆರವಾಗಿದ್ದ ಸ್ಥಾನಗಳ ಜೊತೆಗೆ ಮತ್ತು ಕೆಲವು ಸ್ಥಾನಗಳನ್ನು ಕಾಲಿ ಮಾಡಿಸಿ ನೂತನ ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇವುಗಳಲ್ಲಿ ರಾಜ್ಯದ ನಾಲ್ವರಿಗೆ ಅವಕಾಶ ದೊರೆತಿದ್ದು, ಇನ್ನಷ್ಟೇ ಯಾವ ಖಾತೆ ದೊರೆಯಲಿದೆ ಎನ್ನುವ ವಿಚಾರ ತಿಳಿಯಬೇಕಿದೆ.
ಈ ಬಾರಿ ಮೋದಿ ಸಂಪುಟದಲ್ಲಿ ಯುವ ಸಂಸದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. 50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 14 ಸಚಿವರು ಸಂಪುಟ ಸೇರಿದ್ದಾರೆ. ವಿಶೇಷವಾಗಿ 5 ಮಹಿಳೆಯರು, 13 ವಕೀಲರು, 6 ವೈದ್ಯರು, 5 ಎಂಜಿನಿಯರ್ ಗಳು ಮತ್ತು 7 ನಾಗರೀಕ ಸೇವೆಯಲ್ಲಿದ್ದ ಸಚಿವರನ್ನು ಸೇರಿಸಿಕೊಂಡಿದ್ದಾರೆ.