ಬೆಂಗಳೂರು (25): ಕನ್ನಡದ ಹಿರಿಯ ನಟಿ ಜಯಂತಿ (76) ಅವರು ಇಂದು ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಸಿಕೊಳ್ಳುತ್ತಿದ್ದ ನಟಿ ಜಯಂತಿಯವರು ಕನ್ನಡ ಸೇರಿದಂತೆ ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿಮನಯಿಸಿದ್ದಾರೆ. ರಾಜ್ ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು, ಕನ್ನಡಿಗರಿಗೆ ಚಿರಪರಿಚಿತ. ಇವರು ಕನ್ನಡದ ಜೇನು ಗೂಡು, ರಾಮಾಂಜನೇಯ ಯುದ್ಧ, ತುಂಬಿದ ಕೊಡ, ಇಮ್ಮಡಿ ಪುಲಕೇಶಿ, ರೌಡಿ ರಂಗಣ್ಣ, ಬಾಳು ಬೆಳಗಿತು, ಬಾಳಿನ ಗುರಿ, ಶಿವಕೊಟ್ಟ ಸೌಭಾಗ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟನೆಯನ್ನು ಮಾಡಿದ್ದರು.
ಇವರು 6 ಜನವರಿ 1945 ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ಇವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಮಣ್ಯಂ ತಾಯಿ ಸಂತಾನಲಕ್ಷ್ಮಿ ಇವರ ಹಿರಿಯ ಪುತ್ರಿಯಾಗಿ ಜನನ. ಇವರ ತಾಯಿಗೆ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಹಂಬಲ ಇದ್ದುದ್ದರಿಂದ ಇವರನ್ನು ಚಂದ್ರಕಲಾ ಅವರ ನೃತ್ಯ ಶಾಲೆಗೆ ಸೇರಿಸಿದರು.
ಕನ್ನಡದ ನಿರ್ದೇಶಕ ಪುಟ್ಟಸ್ವಾಮಿಯವರು ಜಯಂತಿಯವರನ್ನು ತಮ್ಮ “ಜೇನುಗೂಡು” ಚಿತ್ರದಲ್ಲಿ ನಟಿಸಲು ಅವಕಾಶ ನೀಡಿ, ಸಿನಿ ಜೀವನಕ್ಕೆ ಕರೆತಂದರು. ಆ ನಂತರದಲ್ಲಿ ಇವರ ಖ್ಯಾತಿ ಹೆಚ್ಚುತ್ತಲೇ ಸಾಗಿತು. ಇವರು ಕನ್ನಡದ ನೂರಾರು ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದುಕೊಂಡರು. ಇದಲ್ಲದೆ ರಾಜ್ ಕುಮಾರ್ ಅವರ ಜೊತೆಯಲ್ಲಿ 45 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರಿಗಿದೆ.